“ಶ್ರೀ ಸದಾನಂದ ಯೋಗಿ”

ಶ್ರೀ ಸದಾನಂದಯೋಗಿಯವರು ನೂರಾರು ವರ್ಷಗಳಿಂದ ತಮ್ಮ ಶಿಷ್ಯನಿಗಾಗಿ ಎದುರು ನೋಡಿದ ಮಹಾ ಗುರು. ಅರೇಬಿಯಾ ದೇಶದಿಂದ ಭಾರತದೇಶಕ್ಕೆ ಬಂದು… ತನ್ನ ಶಿಷ್ಯನಿಗಾಗಿ ಹುಡುಕುತ್ತಾ ಕರ್ನೂಲ್‌ಗೆ ಬಂದು… ಅಲ್ಲಿ ಪತ್ರೀಜಿಯವರನ್ನು ಭೇಟಿಯಾದರು. ನೂರಾರು ವರ್ಷಗಳಿಂದ ತಮ್ಮಲ್ಲಿ ನಿಧಿಯಂತೆ ಕಾಯ್ದಿಟ್ಟುಕೊಂಡ ತಮ್ಮ ಆಧ್ಯಾತ್ಮಿಕ ಶಕ್ತಿಗಳೆಲ್ಲವನ್ನೂ ಎರಡೂವರೆ ವರ್ಷಗಳ ಅವಧಿಯಲ್ಲಿ ಪತ್ರೀಜಿಯವರಿಗೆ ಧಾರೆಯೆರೆದು, ಇನ್ನು ತಮ್ಮ ಕರ್ತವ್ಯ ಪೂರ್ಣಗೊಂಡಿದೆ ಎಂಬ ಭಾವನೆಯಿಂದ… ಈ ಲೋಕದಿಂದ ಹೊರನಡೆದಿದ್ದಾರೆ. ಜುಲೈ 3ರಂದು ಕರ್ನೂಲ್ ಜಿಲ್ಲೆ, ನಂದವರಂ ಗ್ರಾಮದಲ್ಲಿರುವ ಶ್ರೀ ಸದಾನಂದ ಯೋಗಿ ಅವರ ಮಹಾಸಮಾಧಿಯ ಅಂಗಳದಲ್ಲಿ ಗುರುಪೂರ್ಣಿಮೆಯು ಮಹಾದ್ಭುತವಾಗಿ ನಡೆದ ವಿಶೇಷಸಂದರ್ಭದಲ್ಲಿ “ಬ್ರಹ್ಮರ್ಷಿಪತ್ರೀಜಿ” ಅನುಭೂತಿಗಳು ನಿಮಗಾಗಿ ಇಲ್ಲಿವೆ.

ಶ್ರೀ ಸದಾನಂದಯೋಗಿ ಅವರ ಪರಿಚಯ ನನಗೆ ನನ್ನ ಸ್ನೇಹಿತರಾದ ಶ್ರೀರಾಮಚೆನ್ನಾರೆಡ್ಡಿ ಅವರ ಮೂಲಕ ದೊರೆಯಿತು. ನಾನು ಕೋರಮಂಡಲ್ ಸಂಸ್ಥೆಯಲ್ಲಿದ್ದೆ. ಶ್ರೀ ರಾಮಚೆನ್ನಾರೆಡ್ಡಿ ಪ್ಯಾರಿ ಕಂಪೆನಿಯಲ್ಲಿದದರು. ಆದರೂ, ಎಲ್ಲರೂ ಸೇರಿ ಕೆಲಸಮಾಡುತ್ತಿದ್ದೆವು. ನಂದ್ಯಾಲ ಸಮೀಪದಲ್ಲಿರುವ ಆತ್ಮಕೂರು ಹತ್ತಿರ “ರೇಗಡಿಗೂಡೂರು” ಎನ್ನುವ ಗ್ರಾಮವಿದೆ. ಆ ಗ್ರಾಮಕ್ಕೆ ಹತ್ತಿರ ಇರುವ ಒಂದು ಹಳ್ಳಿಗೆ ರಾಮಚೆನ್ನಾರೆಡ್ಡಿ ಉದ್ಯೋಗ ನಿಮಿತ್ತ ಹೋದಾಗ … ಅಲ್ಲಿ ಆಗಲೇ 90 ವರ್ಷಗಳ ವಯಸ್ಸು ಇರುವ ಶ್ರೀ ಸದಾನಂದಯೋಗಿ ಅವರ ಶಿಷ್ಯನು ಶ್ರೀ “ಯೋಗಿ ರಾಮರೆಡ್ಡಿ” ಅವರನ್ನು ಭೇಟಿಯಾದರಂತೆ. ಅವರ ಮೂಲಕ ಶ್ರೀ ಸದಾನಂದಯೋಗಿ ಅವರ ವಿವರಗಳನ್ನೆಲ್ಲಾ ತಿಳಿದುಕೊಂಡು ಕರ್ನೂಲ್‌ನಲ್ಲಿ ಅವರು ಇರುವ ವಿಳಾಸ ತೆಗೆದುಕೊಂಡು ನನ್ನ ಹತ್ತಿರ ಬಂದರು.

“ಕರ್ನೂಲ್‌ನಲ್ಲಿ ಒಬ್ಬ ಹಿರಿಯರಿದ್ದಾರೆ. ಅವರನ್ನು ನಾವು ತಕ್ಷಣ ಭೇಟಿಯಾಗಬೇಕು” ಎನ್ನುತ್ತಾ ರಾಮಚೆನ್ನಾರೆಡ್ಡಿ ನನಗೆ ಹೇಳಿದ ತಕ್ಷಣ… ಎಲ್ಲರೂ ಸೇರಿ ಅವರ ಹತ್ತಿರಕ್ಕೆ ಹೋದೆವು … ಅದು ಚರಿತ್ರೆ. ಆಗ ನಾನು ಕರ್ನೂಲ್‌ನಲ್ಲಿರುವ ಕೋರಮಂಡಲ್ ಫರ್ಟಿಲೈಸರ‍್ಸ್‌ನಲ್ಲಿ ಸೇಲ್ಸ್ ಪ್ರಮೋಷನ್ ಆಫೀಸರಾಗಿ ಕೆಲಸ ಮಾಡುತ್ತಿದ್ದೆ. 1981 ಜನವರಿ ಒಂದರಂದು ಕರ್ನೂಲ್‌ನಲ್ಲಿ ಶ್ರೀ ಸದಾನಂದಯೋಗಿ ಅವರನ್ನು ಭೇಟಿಯಾದೆ. ರಾಮಚೆನ್ನಾರೆಡ್ಡಿಯವರು ತಂದ ವಿಳಾಸ ಹಿಡಿದು ಆ ದಿನ ಬೆಳಗ್ಗೆ 7.30 ಗಂಟೆಗೆ … ಆಗಿನ ಕರ್ನೂಲ್ ಹಳೇಬಸ್ ನಿಲ್ದಾಣದ ಹಿಂದೆ ಇರುವ “ರಾಘವೇಂದ್ರ ಲಾಡ್ಜ್”ಗೆ ಹೋದೆವು. ಆ ಲಾಡ್ಜ್‌ನಲ್ಲಿ ಒಂದು ಪುಟ್ಟಕೊಠಡಿಯಲ್ಲಿ ಇರುವ ನಾಲಕ್ಕೈ‌ದು ಜನ ಕುಳಿತುಕೊಳ್ಳಬಹುದಾದ ಒಂದು ಮಂಚದ ಮೇಲೆ ಅವರು ಮಲಗಿಕೊಂಡಿದ್ದರು.

ನಾನು, ರಾಮಚೆನ್ನಾರೆಡ್ಡಿ ಮತ್ತು ಪ್ಯಾರಿ ಕಂಪೆನಿಯ ವೆಂಕಟರತ್ನಂ ಮೂವರು ಸೇರಿ ಅವರ ಹತ್ತಿರ ಹೋದೆವು.

ನಾವು ಹೋದಾಗ ಮಲಗಿಕೊಂಡಿದ್ದವರು ನಾವು ಬಂದ ಶಬ್ದ ಕೇಳಿ … ಕಣ್ಣುಗಳನ್ನು ತೆರೆದು ನೋಡಿ … ಏನುಬೇಕು? ಎಂದು ಗಂಭೀರವಾಗಿ ಕೇಳಿದರು.

ಇನ್ನೂ ನಾವು ಉತ್ತರಕೊಡುವಷ್ಟರಲ್ಲೇ ಇಲ್ಲಿ “ಬ್ರಹ್ಮಜ್ಞಾನ ವಿನಹ ನಿಮಗೆ ಇನ್ನೇನ್ನೂ ಸಿಗುವುದಿಲ್ಲ” ಎಂದರು.
“ನಮಗೆ ಬೇಕಾಗಿರುವುದು ಕೂಡಾ ಅದೇ ಸ್ವಾಮಿ. ಇನ್ನೂ ಬೇರೆ ಯಾವುದಕ್ಕೋಸ್ಕರವೂ ನಾವು ಬಂದಿಲ್ಲ” ಎಂದು ವಿನಯದಿಂದ ಹೇಳಿದೆವು.
ಸಾಮಾನ್ಯವಾಗಿ ಸ್ವಾಮೀಜಿಗಳ ಹತ್ತಿರಕ್ಕೆ ಕೆಲಸಕ್ಕೆ ಬಾರದ ಮನುಷ್ಯರೆಲ್ಲಾ ಬಂದು “ನನ್ನ ಮಗನಿಗೆ ಉದ್ಯೋಗ ಬೇಕು, ನನ್ನ ಮಗಳಿಗೆ ಮದುವೆ ಆಗಬೇಕು, ನಮ್ಮ ಯಜಮಾನರು ನನ್ನನ್ನು ಸರಿಯಾಗಿ ನೊಡಿಕೊಳ್ಳುತ್ತಿಲ್ಲ ಸ್ವಾಮಿ” ಎನ್ನುತ್ತಾ ಅವರನ್ನು ನಾನಾ ರೀತಿ ಬೇಸರಪಡಿಸುತ್ತಾರೆ.

ಪಾಪಾ, ಈ ಸ್ವಾಮೀಜಿ ಸಹ ಹಾಗೆಯೇ ಎಲ್ಲರಿಂದಲೂ ಬೇಸತ್ತು ಹೋಗಿರುವುದರಿಂದ, “ನಮಗೆ ಬ್ರಹ್ಮಜ್ಞಾನ ವಿನಹ ಇನ್ನೆನೂ ಬೇಡ ಸ್ವಾಮೀಜಿ” ಎಂದು ನಾವು ಹೇಳಿದ ತಕ್ಷಣ ನಮ್ಮ ಮಾತು ಕೇಳಿ ಬಹುಶಃ ಅವರು ತುಂಬಾ ಸಂತೋಷಪಟ್ಟಿರುತ್ತಾರೆ. ತಕ್ಷಣ ಎದ್ದುಕುಳಿತುಕೊಂಡು ತುಂಬಾ ಪ್ರಸನ್ನತೆಯಿಂದ… “ಓಹೋ ಎಂದು ತಲೆಯಲ್ಲಾಡಿಸಿ… ಐದು, ಹತ್ತು ನಿಮಿಷಗಳವರೆಗೂ ಏನೂ ಮಾತನಾಡಲಿಲ್ಲ”.

ಅನಂತರ ನಿರರ್ಗಳವಾಗಿ ಒಂದು ಶ್ಲೋಕದ ನಂತರ ಇನ್ನೊಂದು ಶ್ಲೋಕಗಳನ್ನು ಅರಬಿಕ್ ಭಾಷೆಯಲ್ಲಿ, ತೆಲುಗಿನಲ್ಲಿ, ಆಗಾಗ ಆಂಗ್ಲಪದಗಳನ್ನು ಬಳಸಿ ಅರ್ಥಗಂಟೆಯ ಕಾಲ ನಯಾಗರಾ ಜಲಪಾತದ ಹಾಗೆ ತನ್ನ ಬ್ರಹ್ಮಜ್ಞಾನವನ್ನು ಪೂರ್ತಿ ನಮ್ಮ ಮೇಲೆ ಸುರಿದರು. ಅದು ಕೇಳಿದ ನಾನು… ನನ್ನ ಈ ಜೀವನದಲ್ಲಿ ಮೊಟ್ಟಮೊದಲನೆಯ ಬಾರಿ “ಪರವಶನಾದೆನು” ನನ್ನನ್ನು ಹಾಗೆ ಪರವಶವನನ್ನಾಗಿ ಮಾಡಿದ ಗುರುವೇ … “ಶ್ರೀ ಸದಾನಂದಯೋಗಿ”

ಅನಂತರ, “ನಾಳೆ ಮುಂಜಾನೆ ೪.೩೦ ಗಂಟೆಗೆ ಮತ್ತೆ ಬನ್ನಿ, ಧ್ಯಾನ ಹೇಳಿಕೊಡುತ್ತೇನೆ”ಎಂದರವರು.
1975ರಲ್ಲಿ ಉದ್ಯೋಗನಿಮಿತ್ತ ನಾನು ಕರ್ನೂಲ್‌ಗೆ ಬಂದೆ. ಸರಿಯಾಗಿ ಅದೇ ವರ್ಷದಲ್ಲೇ, ಸ್ವಾಮೀಜಿ ಸಹ ಕರ್ನೂಲ್‌ಗೆ ಬಂದರು. ಆದರೆ, ನಾನು ಮಾತ್ರ 1981 ರಲ್ಲೇ ಸ್ವಾಮೀಜಿ ಅವರನ್ನು ಭೇಟಿಯಾದೆ. ಹಿಂದಿನ ಒಂದು ಜನ್ಮದಲ್ಲಿ “ಶ್ರೀ ಸದಾನಂದ ಯೋಗಿ”ಯವರು ಜೀಸಸ್ ಕ್ರೈಸ್ಟ್‌ರವರ ಗುರುಗಳಾದ “ಜಾನ್ ದಿ ಬಾಪ್ಟಿಸ್ಟ್” ಆಗಿದ್ದರು ಎಂದು ನಾನು ತಿಳಿದುಕೊಂಡೆ.

ಅವರು ಅದಕ್ಕು ಮುಂಚೆ ಆರು ವರ್ಷಗಳಿಂದ ಕರ್ನೂಲ್‌ನಲ್ಲೇ ಇದ್ದಾರೆ. ನಮಗೇನುಗೊತ್ತಿದೆ? ಶಿಷ್ಯನು ಎದುರಿಗೆ ಇರಬಹುದು… ಗುರುಗಳು ಪಕ್ಕದಲ್ಲೇ ಇರಬಹುದು… ಆದರೆ, ಗುರು ಶಿಷ್ಯರ ಮಿಲನ ಜರುಗುವುದು ಎನ್ನುವುದು ಮಾತ್ರ ಶಿಷ್ಯನು ಅದಕ್ಕೆ ಸಿದ್ಧವಾದಾಗ ಮಾತ್ರವೇ. ಆ ದಿನ ನಾನು ಸಿದ್ಧನಾಗಿದ್ದೆ. ಆದ್ದರಿಂದಲೇ ನನಗೆ ಅವರ ದರ್ಶನ ಭಾಗ್ಯಸಿಕ್ಕಿತು.

ಆ ಮಹಾಸ್ವಾಮಿಯನ್ನು ಭೇಟಿಯಾದ ಮರುಕ್ಷಣದಲ್ಲೇ, ಅವರ ಗಂಭೀರವದನವನ್ನು ನಾನು ನೋಡಿದ ತಕ್ಷಣವೇ … ನನಗೆ ನಾನೇ ಆ ಸ್ವಾಮಿಗೆ ಅರ್ಪಿಸಿಕೊಂಡೆ. ಮರುದಿನ … ಅಂದರೆ, 1981 ಜನವರಿ 2ರಂದು… ಪ್ರಾತಃಕಾಲ 4.30 ಗಂಟೆಗಳಿಗೆ ಪುನಃ ನಾವು ಮೂರೂ ಜನ ತ್ರಿಮೂರ್ತಿಗಳು ಹೋದೆವು. ನಮ್ಮನ್ನು ‘ಕುಳಿತುಕೊಳ್ಳಿ’ ಎಂದು ಹೇಳಿ, “ಕೈಗಳಲ್ಲಿ ಕೈಗಳನ್ನು ಜೋಡಿಸಿ, ಎರಡು ಕಣ್ಣುಗಳನ್ನೂ ಮುಚ್ಚಿಕೊಳ್ಳಿ; ಶ್ವಾಸದ ಮೇಲೆ ಗಮನವಿಡಿ” ಎಂದರು.

ಅವರು ನಮಗೆ ಹೇಳಿಕೊಟ್ಟಿದ್ದು ಇಷ್ಟೇ. ಯಾವ ಮಂತ್ರವೂ ಇಲ್ಲ. ಯಾವ ತಂತ್ರವೂ ಇಲ್ಲ. ಯಾವ ಯಂತ್ರವೂ ಇಲ್ಲ.
ಆಗಲೇ ನಾನು ಧ್ಯಾನ ಜ್ಞಾನಿ. ಆದರೆ … ಈ “ಶ್ವಾಸದ ಮೇಲೆ ಗಮನ” ಧ್ಯಾನ ವಿಧಾನ ಎನ್ನುವುದು ಮೊದಲನೆಯ ಬಾರಿ ಈ ಜನ್ಮದಲ್ಲಿ ಮತ್ತೊಬ್ಬ ಯೋಗೀಶ್ವರರ ಬಾಯಿಂದ ಕೇಳಿಸಿಕೊಂಡೆ. ಅಂದಿನಿಂದ, ಅಂದರೆ 1981 ಜನವರಿ ಒಂದರಿಂದ ಶ್ರೀ ಸದಾನಂದಯೋಗಿ ಅವರ ಹತ್ತಿರ ನನ್ನ ಆಧ್ಯಾತ್ಮಿಕ ಶಿಷ್ಯತ್ವ ಪ್ರಾರಂಭವಾಯಿತು.

ಕೋರಮಂಡಲ್ ಫರ್ಟಿಲೈಜಸರ‍್ಸ್ ಕಂಪೆನಿಯಲ್ಲಿ ರೀಜನಲ್ ಸೇಲ್ಸ್ ಆಫೀಸರ್ ಆದ ನಾನು, ಉದ್ಯೋಗ ನಿಮಿತ್ತ ಮಹಬೂಬ್‌ನಗರ್, ಕರ್ನೂಲ್, ಅನಂತಪುರ, ಕಡಪ, ಚಿತ್ತೂರು, ನೆಲ್ಲೂರು … ಹೀಗೆ ಒಟ್ಟು ಆರು ಜಿಲ್ಲೆಗಳಲ್ಲಿ ಓಡಾಡುತ್ತಿದ್ದೆ. ತಿಂಗಳಲ್ಲಿ 25 ದಿನಗಳು ಪ್ರವಾಸದಲ್ಲೇ ಐದಾರು ದಿನಗಳು ಮಾತ್ರ ಕರ್ನೂಲ್‌ನಲ್ಲಿ ಇರುತ್ತಿದ್ದೆ.

ಅದಕ್ಕೂ ಮುನ್ನಾ ಕರ್ನೂಲ್‌ನಲ್ಲಿ ಇದ್ದಷ್ಟು ದಿನಗಳು “ಅಗ್ರಿಫೆಂಡ್ಸ್ ಕ್ಲಬ್”ಗೆ ಹೋಗಿ ಇಸ್ಪೀಟ್ ಆಟ (cards) ಆಡುತ್ತಿದ್ದೆ. ಇನ್ನು ಸದಾನಂದ ಯೋಗಿ ಅವರನ್ನು ಭೇಟಿ ಆದನಂತರದಿಂದ ಈ ಕ್ಲಬ್ ಬಂದ್… ಇಸ್ಪೇಟ್ ಆಟ ಬಂದ್. ಎಲ್ಲಾ ಬಂದ್. ತುಂಬಾ ಕಾತುರದಿಂದ ಹೋಗಿ ಅವರ ಹತ್ತಿರ ಕುಳಿತುಕೊಂಡು… ಅನೇಕಾನೇಕ ಅದ್ಭುತವಾದ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೆ.

ಶ್ರೀ ಸದಾನಂದ ಯೋಗಿ ಅವರು ಒಂದಾದ ನಂತರ ಮತ್ತೊಂದರಂತೆ ಸಿಗರೇಟ್ ಸೇದುತ್ತಿದ್ದರು. ನಾವು ಅವರಿಗೆ ಪ್ರತಿದಿನ ಎರಡು ಸಿಗರೇಟ್ ಪ್ಯಾಕೆಟ್ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆವು. ‘ಚಾಯ್’ ಕುಡಿಯುತ್ತಾ ಅವರು ಅನೇಕಾನೇಕ ಆಧ್ಯಾತ್ಮಿಕ ಜೀವನ ಸತ್ಯಗಳನ್ನು ನಮಗೆ ನಿರರ್ಗಳವಾಗಿ ಹೇಳುತ್ತಲೇ ಇರುತ್ತಿದ್ದರು.

ಒಂದು ದಿನ ಸ್ವಾಮೀಜಿ ನಮಗೆ ಹೇಳುರುವಂತಹ ಕಥೆ

“ಇಲ್ಲಿ ಕರ್ನೂಲ್ ಹತ್ತಿರ ‘ಆತ್ಮಕೂರು’ ಎಂದು ಒಂದು ಊರಿದೆ. ಅಲ್ಲಿಂದ ಶ್ರೀಶೈಲದ ಕಾಡು ಪ್ರಾರಂಭವಾಗುತ್ತದೆ. ಅಲ್ಲಿಗೆ ಒಂದು ಹುಣ್ಣಿಮೆಯ ದಿನ ಧ್ಯಾನಿಗಳೆಲ್ಲರನ್ನೂ ಕರೆದುಕೊಂಡು ಹೋದೆ. ಅಲ್ಲಿ ಕಾಡಲ್ಲಿ ಎಲ್ಲರೂ ಕುಳಿತುಕೊಂಡು ಮಾತನಾಡುತ್ತಾ ಊಟ ಮಾಡುತ್ತಿದ್ದರು. ಅಷ್ಟರಲ್ಲಿ ಎರಡು ಹುಲಿಗಳು ಓಡಿಬಂದವು. ಹುಲಿಗಳು ಬಂದಾಗ ಎಲ್ಲರೂ ಭಯದಿಂದ ಆ ಕಡೆ… ಈ ಕಡೆ… ಓಡಿಹೋದರು. ಆ ಎರಡೂ ಹುಲಿಗಳು ನನ್ನ ಹತ್ತಿರಕ್ಕೆ ಬಂದಿವೆ. ನಾನು ಅವುಗಳ ಜೊತೆ ಸ್ವಲ್ಪಹೊತ್ತು ಮಾತನಾಡಿ ಕಳಿಸಿಬಿಟ್ಟೆ. ಅನಂತರ ಅವರೆಲ್ಲರನ್ನೂ ಕರೆದು ‘ನೀವು ಏತಕ್ಕಾಗಿ ಓಡಿಹೋದಿರಿ? ನನ್ನ ಹತ್ತಿರ ಅವು ಬಂದಾಗ ನೀವು ಕೂಡಾ ನನ್ನ ಹತ್ತಿ ಇದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಎಂದರು.

ಇಂತಹ ಅನೇಕ ಕಥೆಗಳನ್ನು ಅವರು ನಮಗೆ ಹೇಳುತ್ತಿದ್ದರು.

ಅವರದು ಅಚಲಸಿದ್ಧಾಂತ … ಶ್ರೀ ಶಿವರಾಮ ದೀಕ್ಷಿತರು ಎಂದರೆ ಅವರಿಗೆ ತುಂಬಾ ಇಷ್ಟ … ಸದಾ ಅವರು ದೀಕ್ಷಿತರ ಪದ್ಯಗಳನ್ನು ವಿಶೇಷವಾಗಿ ಹೇಳುತ್ತಿದ್ದರು.

ಅವರಿಗೆ ಅರಬಿಕ್ ಭಾಷೆ ನಿರರ್ಗಳವಾಗಿ ಬರುತ್ತಿತ್ತು. ಆ ಭಾಷೆ ಅವರ ಬಾಯಿಂದ, ಕೇಳಲು ತುಂಬಾ ಇಂಪಾಗಿರುತ್ತಿತ್ತು. ಅವರ ಬಾಯಿಂದ ಬರುವ “ಸುಭಾಷ್” ಎನ್ನುವ ಕರೆ ನನಗೆ ಎಷ್ಟು ಮಧುರವಾಗಿರುತ್ತಿತ್ತೊ ಹೇಳಲಾಗುವುದಿಲ್ಲ.

ಅವರಿಗೆ ಕೇವಲ ಕೆಲವರು ಮಾತ್ರ ಶಿಷ್ಯರು ಇರುತ್ತಿದ್ದರು. ಉಳಿದವರೆಲ್ಲಾ ಭಕ್ತರು. ಆತ್ಮಜ್ಞಾನಕ್ಕೂ, ಧ್ಯಾನಕ್ಕೂ ಬರುವ ಶಿಷ್ಯರು ಕೇವಲ ನಾಲ್ಕೈದು ಜನ ಮಾತ್ರವೇ. ಅದರಲ್ಲಿ ನಾನು, ರಾಮಚೆನ್ನಾರೆಡ್ಡಿ, ವೆಂಕಟರತ್ನಂ, ಜನಾರ್ಧನರಾವು, ಸೂರ್ಯಮೋಹನ್.

ನಮ್ಮ ಧ್ಯಾನಜ್ಞಾನ ಸಾಧನೆಗಳು ಹೀಗೆ ನಡೆಯುತ್ತಿರುವಾಗ… 1982ನೇ ವರ್ಷದಲ್ಲಿ ಕೇಂದ್ರ ಕಚೇರಿಯಿಂದ ಕರೆ ಬಂತು. ನೀನು ಅತ್ಯಂತ ಹಿರಿಯ ಅಧಿಕಾರಿ, ನಿನಗೆ ಬಡ್ತಿನೀಡುತ್ತೇವೆ, ನೀನು ಕೇಂದ್ರ ಕಚೇರಿಗೆ ಬರಬೇಕು, ಆದ್ದರಿಂದ, ನಿನ್ನನ್ನು ಹೈದರಾಬಾದ್‌ಗೆ ವರ್ಗಾವಣೆ ಮಾಡುತ್ತಿದ್ದೇವೆ ಎಂದರು.

“ನಾನು ಬರುವುದಿಲ್ಲ” ಎಂದು ಅವರಿಗೆ ಖಚಿತವಾಗಿ ಹೇಳಿಬಿಟ್ಟೆ. ನನ್ನ ಗುರುಗಳು ಇಲ್ಲಿರುವಾಗ ನನಗೆ ಹೈದರಾಬಾದ್‌ನಲ್ಲೇನು ಕೆಲಸ? ಹೈದರಾಬಾದ್‌ನಲ್ಲಿ ನಮ್ಮ ತಾಯಿ ಇದ್ದಾರೆ; ತಂದೆಯವರಿದ್ದಾರೆ; ಸ್ವಂತ ಮನೆ ಇದೆ. ನಿಜಕ್ಕೂ ಅಲ್ಲಿಗೆ ಹೋದರೆ ನನಗೆ ತುಂಬಾ ಸುಖವಾಗಿರುತ್ತದೆ… ಮತ್ತೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳು ಸಹ ಉಳಿಯುತ್ತವೆ. ಆದರೆ, ಇವೆಲ್ಲಕ್ಕೂ ಮೀರಿದ ಬೃಹತ್ ನಿಧಿ, ನನ್ನ ಗುರುಗಳು ಇಲ್ಲಿದ್ದಾರೆ. ಆದ್ದರಿಂದ, “ನಾನು ಕರ್ನೂಲ್ ಬಿಡುವುದಿಲ್ಲ” ಎಂದು ನಿರ್ಣಯಿಸಿಕೊಂಡು “ನನಗೆ ನಿಮ್ಮ ಪ್ರಮೋಷನ್ ಬೇಡ … ಏನೂ ಬೇಡ. ನಾನು ಕರ್ನೂಲ್‌ನಲ್ಲೇ ಇರುತ್ತೇನೆ” ಎಂದು ನಮ್ಮ ಕೇಂದ್ರ ಕಚೇರಿಯವರಿಗೆ ದೃಢವಾಗಿ ಹೇಳಿಬಿಟ್ಟೆ.

ಸರಿ ಎಂದರು ನಮ್ಮ ಕೇಂದ್ರ ಕಚೇರಿಯವರು..

ಪುನಃ 1983 ರಲ್ಲಿ ಈ ಸಲವಾದರೂ ಬಾರಯ್ಯಾ .. ಹೈದರಾಬಾದ್‌ಗೆ, ಕೇಂದ್ರ ಕಚೇರಿಯಲ್ಲಿ ನಿನ್ನ ಅವಶ್ಯಕತೆ ಇದೆ ಎಂದರು…
“ನಾನು ಬರುವುದಿಲ್ಲ” ಎಂದು ಪುನಃ ಹೇಳಿದೆ. ಪಾಪ.. ನಮ್ಮ ಕೇಂದ್ರ ಕಚೇರಿಯವರು ತುಂಬಾ… ತುಂಬಾ … ಒಳ್ಳೆಯವರು. “ಸರಿ” ಎಂದು ನನ್ನನ್ನು ನನ್ನ ಇಷ್ಟಕ್ಕೆ ಬಿಟ್ಟುಬಿಟ್ಟರು.

1983 … ಏಪ್ರಿಲ್ 16ರಂದು ನನ್ನ ಗುರುಗಳು ಶ್ರೀ ಸದಾನಂದ ಯೋಗಿಯವರು ನನ್ನನ್ನು ಕರೆದು “ಸುಭಾಷ್, ನಾನು ಶರೀರ ತ್ಯಜಿಸಬೇಕೆಂದು ನಿರ್ಣಯಿಸಿಕೊಂಡಿದ್ದೇನೆ, ನೀನು ನನಗಾಗಿ ಸಮಾಧಿಯನ್ನು ಸಿದ್ಧಗೊಳಿಸು” ಎಂದು ಆದೇಶ ನೀಡಿದರು.

“ಸರಿ ಸ್ವಾಮಿ” ಎಂದು ಹೇಳಿ … ಕರ್ನೂಲ್ ಪಟ್ಟಣದ ಸುತ್ತೂ ಸ್ಥಳಕ್ಕಾಗಿ ಹುಡಿಕಿದೆ. ಎಲ್ಲೂ ನನಗೆ ತೃಪ್ತಿಕರವಾದ ಸ್ಥಳ ಸಿಗಲಿಲ್ಲ. ಕೊನೆಗೆ “ಚೆನ್ನಾರೆಡ್ಡಿ” ಎನ್ನುವ ಭಕ್ತನೊಬ್ಬನು “ಬನಗಾನಪಲ್ಲಿ ಹತ್ತಿರ ಇರುವ ‘ನಂದವರಂ’ ಗ್ರಾಮದಲ್ಲಿರುವ ನನ್ನ ಹೊಲದಲ್ಲಿ ಗುರುಗಳಿಗೆ ಸಮಾಧಿ ಏರ್ಪಾಟು ಮಾಡಿದರೆ ಚೆನ್ನಾಗಿರುತ್ತದೆ” ಎಂದರು.

ತಕ್ಷಣ ಚೆನ್ನಾರೆಡ್ಡಿ, ನಾನು ಇಬ್ಬರೂ ಸೇರಿ ನಂದವರಂಗೆ ಹೋದೆವು. ಆ ಸ್ಥಳ ಚೆನ್ನಾಗಿದೆ ಎಂದನಿಸಿ … ಒಂದು ಸ್ಥಳವನ್ನು ಆಯ್ಕೆಮಾಡಿ.. ಆ ಸ್ಥಳವನ್ನೆಲ್ಲಾ ಆಗಿದು ನೆಲವನ್ನು ಮಟ್ಟಸಗೊಳಿಸಿ… ಗುರುಗಳ ಆಜ್ಞಾನುಸಾರ ಸಮಾಧಿಯನ್ನು ಸಿದ್ಧಮಾಡಿದೆವು.

ಸ್ವಾಮೀಜಿ ತಾವು ಹೇಳಿರುವ ಸಮಯದ ಪ್ರಕಾರ ತಮ್ಮ ಶರೀರವನ್ನು ತ್ಯಜಸಿದರೆ … ಮತ್ತೆ ಪೋಲೀಸರಿಂದ ಏನು ತೊಂದರೆ ಆಗತ್ತದೋ ಎಂಬ ಆತಂಕದಿಂದ, ನಾನು ನನ್ನ ಸಂಗೀತ ಗುರುಗಳು ಮತ್ತು ದೊಡ್ಡ ವೈದ್ಯರಾಗಿರುವಂತಹ ಡಾ|| ಶ್ರೀಪಾದ ಪಿನಾಕಪಾಣಿ ಅವರನ್ನು ಭೇಟಿ ಮಾಡಿ “ಶ್ರೀ ಸದಾನಂದ ಯೋಗಿ ಅವರು ತಮ್ಮ ಶರೀರವನ್ನು ತ್ಯಜಿಸುತ್ತಿದ್ದಾರೆ, ನೀವು ಬಂದು ಅವರನ್ನು ಪರೀಕ್ಷಿಸಿ ಅವರ ಕೊನೆಯ ಶ್ವಾಸವನ್ನು ನೋಡಿ ‘ಇನ್ನು ಶ್ವಾಸ ಇಲ್ಲ’ ಎಂದು ರಿಕಾರ್ಡ್ ಮಾಡಿ” ಎಂದು ಕೋರಿದೆ.

ಅವರು ಬಂದು ಹಾಗೆಯೇ ರಿಕಾರ‍್ಡ್ ಮಾಡಿದರು. ನಿಬಂಧನೆಗಳ ಪ್ರಕಾರ ಎಲ್ಲಾ ಅಡೆತಡೆ ಇಲ್ಲದೇ ನಡೆದುಹೋಯಿತು. ನಂತರ ಶ್ರೀ ಸದಾನಂದಯೋಗಿ ಅವರ ಶರೀರವನ್ನು ನಂದವರಂಗೆ ಕರೆತಂದು ಅಲ್ಲಿ ನಾವು ಸಿದ್ಧಮಾಡಿಟ್ಟಿರುವಂತಹ ಸಮಾಧಿಯಲ್ಲಿ ಇರಿಸಿ … ಮೇಲಿಂದ ಒಂದು ಕಲ್ಲನ್ನು ಮುಚ್ಚಿದೆವು. ಹೀಗೆ 1983 ಮೇ 22ರಂದು ಅವರು ತಮ್ಮ ಶರೀರವನ್ನು ತ್ಯಜಿಸಿದರು.

ಅವರು ತಮ್ಮ ಸಮಾಧಿಯನ್ನು ನಂದವರಂನಲ್ಲಿ ಏರ್ಪಾಟು ಮಾಡಿ ಎಂದು ನಮಗೆ ಸೂಚಿಸಿದನಂತರ ಎರಡು ಮೂರು ಬಾರಿ ಸಶರೀರವಾಗಿ ಆ ಗ್ರಾಮದಲ್ಲಿ ಒಬ್ಬ ರೈತನಿಗೆ ದರ್ಶನ ನೀಡಿದರಂತೆ. ಹೋಲಿಸಿ ನೋಡಿ ಕೊಂಡರೆ ಆ ರೈತ ಹೇಳಿದ ಸಮಯಗಳಲ್ಲಿ ಅವರು ಕರ್ನೂಲ್‌ನಲ್ಲಿರುವ ರಾಘವೇಂದ್ರ ಲಾಡ್ಜ್‌ನಲ್ಲೇ ನಮ್ಮಲ್ಲಿ ಯಾರೋ ಒಬ್ಬರ ಸಮಕ್ಷಮದಲ್ಲೇ ಇದ್ದಾರೆ. ಅಂಥ ಶ್ರೇಷ್ಠ ಸಿದ್ಧಪುರುಷರು ಅವರು.

ಪ್ರತಿ ವರ್ಷ ಮೇ 22 ರಂದು ಶ್ರೀ ಜನಾರ್ಥನರಾವು ಅವರು ಹೋಗಿ ಆ ದಿನವೆಲ್ಲಾ ಅಲ್ಲೇ ಇದ್ದು… ಸಮಾಧಿ ಪ್ರದೇಶವನ್ನು ಶುಚಿಮಾಡುತ್ತಿರುತ್ತಾರೆ. ಈ ನಡುವೆ ಶ್ರೀ ಜನಾರ್ಥನರಾವು ಅವರು ಶರೀರವನ್ನು ತ್ಯಜಿಸಿದ್ದಾರೆ. ಪ್ರತಿ ಹುಣ್ಣಿಮೆ ದಿನ ಪಿರಮಿಡ್ ಧ್ಯಾನಿಗಳು ಅನೇಕಮಂದಿ ನಂದವರಂ ಹೋಗುತ್ತಲೇ ಇರುತ್ತಾರೆ.

ಸದಾನಂದ ಯೋಗಿ ಅವರ ಜೀವನ ಚರಿತ್ರೆ

ಸದಾನಂದಯೋಗಿ ಅವರು ಅರೇಬಿಯಾದಲ್ಲಿ ಹುಟ್ಟಿದವರು; ಅರೇಬಿಯಾದ ಆ ಒಂದು ಚಿಕ್ಕ ಗ್ರಾಮದಲ್ಲಿ ಅವರು ಆರು ವರ್ಷದ ಮಗುವಾಗಿರುವಾಗ ಅವರ ಹತ್ತಿರಕ್ಕೆ ಒಬ್ಬ ಮಹಾಯೋಗಿ ಬಂದು “ನನ್ನ ಜೊತೆ ಬರುತ್ತೀಯಾ?” ಎಂದರು.. ಒಂದು ಕ್ಷಣ ಸಹ ಯೋಚಿಸದೇ … ಪುಟ್ಟ “ಸದಾನಂದ” ತಲೆ ಅಲ್ಲಾಡಿಸುತ್ತಾ ತನ್ನ ಅಂಗೀಕಾರವನ್ನು ತಿಳಿಸಿದ ತಕ್ಷಣ ಆ ಯೋಗಿ ಪುಟ್ಟ ಸದಾನಂದನ ಕಾಲುಗಳಿಗೆ ಒಂದು ಪಾದಲೇಪನೆ ಹಚ್ಚಿದರು. ಕಣ್ಣುಗಳನ್ನು ಮುಚ್ಚಿ ತೆರೆಯುವಷ್ಟರಲ್ಲಿ ಇಬ್ಬರೂ ಸೇರಿ ಭೂತಾನ್ ಕಾಡುಗಳಲ್ಲಿ ಇದ್ದರಂತೆ.

ಆ ಕಾಡುಗಳಲ್ಲಿ ಆ ಯೋಗಿಯು ಸದಾ ಧ್ಯಾನ ಮಾಡುತ್ತಲೇ ಇರುತ್ತಿದ್ದರಂತೆ. ಸದಾನಂದನಿಗೆ ಆರು ವರ್ಷಗಳ ವಯಸ್ಸಿನಿಂದ ಅವನಿಗೆ ಹದಿನಾರು ವರ್ಷ ವಯಸ್ಸು ಬರುವವರೆಗೂ ಆ ಯೋಗಿ ಏನೂ ಮಾತನಾಡದೇ ಸದಾ, ಧ್ಯಾನ ಮಾಡುತ್ತಲೇ ಇರುತ್ತಿದ್ದರಂತೆ. ಈ ಹುಡುಗ, ಹತ್ತು ವರ್ಷಗಳಕಾಲ ಆ ಯೋಗಿಗೆ ಸೇವೆಗಳನ್ನು ಮಾಡುತ್ತಲೇ ಇರುತ್ತಿದ್ದರು.

ಹತ್ತು ವರ್ಷಗಳ ಕಾಲ ತನ್ನ ಜೊತೆಗಿದ್ದು ತುಂಬಾ ವಿನಯ ವಿಧೇಯತೆಯಿಂದ ತನಗೆ ಸೇವೆಯನ್ನು ಮಾಡಿದ ಶಿಷ್ಯನ ಗುರುಭಕ್ತಿಗೆ ಮುಗ್ಧರಾದ ಆ ಯೋಗಿ … ಹದಿನಾರು ವರ್ಷದ ಸದಾನಂದನನ್ನು ತನ್ನ ಹತ್ತಿರ ಕೂಡಿಸಿಕೊಂಡು.. “ಇನ್ನು ನಾನು ಶರೀರವನ್ನು ತ್ಯಜಿಸುತ್ತಿದ್ದೇನೆ” ಎಂದು ತಮ್ಮ ನಿರ್ಣಯವನ್ನು ತಿಳಿಸಿ ತಕ್ಷಣ ದೇಹತ್ಯಾಗ ಮಾಡಿದರು.

“ಇದೇನಪ್ಪಾ, ಇಷ್ಟು ದಿನ ನಾನು ನಿಮ್ಮ ಸೇವೆ ಮಾಡಿದೆ, ಇಷ್ಟು ದಿನ ಒಂದು ಮಾತನ್ನೂ ಸಹ ಆಡಲಿಲ್ಲ. ಅಷ್ಟೇ ಅಲ್ಲದೇ ಮೌನ ಮುರಿದು ಮಾತನಾಡಿದ ಈ ದಿನವೇ “ನಾನು ಹೊರಟುಹೋಗುತ್ತಿದ್ದೇನೆ” ಎನ್ನುತ್ತಿರುವಿರಿ”, ಎಂದು ದುಃಖಿಸಿದ ಆ ಹದಿನಾರು ವರ್ಷದ ಸದಾನಂದ, ಗೋಳೋ … ಎಂದು ಅಳುತ್ತಲೇ… ಗುರುಗಳ ಸಮಾಧಿ ಹತ್ತಿರವೇ ಕುಳಿತುಬಿಟ್ಟನು.

ಕೆಲವು ದಿನಗಳ ನಂತರ ಸಮಾಧಿಯಿಂದ ಗುರುಗಳ ಧ್ವನಿ ಕೇಳಿಸಿ … ಇನ್ನು ನೀನು ಉತ್ತರ ದಿಕ್ಕಿನಲ್ಲಿರುವ ಹಿಮಾಲಯಗಳಿಗೆ ಹೊರಟುಹೋಗು… ಇದು ನನ್ನ ಆಜ್ಞೆ” ಎಂದು ಹೇಳಿದರು.

“ನಾನು ಹೋಗುವುದಿಲ್ಲ ಅಂದರೆ ಹೋಗುವುದಿಲ್ಲ” ಎಂದು ಸದಾನಂದ ಬಿಕ್ಕಿಬಿಕ್ಕಿ ಅತ್ತಾಗ “ನೀನು ಹೋಗಬೇಕೆಂದರೆ ಹೋಗಬೇಕು ಅಷ್ಟೆ” ಎನ್ನುತ್ತಾ ಪುನಃ ಗುರುಗಳ ಆಜ್ಞೆ ಸಮಾಧಿಯಿಂದ ಕೇಳಿಬಂತು.

ಇನ್ನು ಸದಾನಂದ ತಕ್ಷಣ ಗುರುಗಳ ಸಮಾಧಿಯನ್ನು ಬಿಟ್ಟು ಹಿಮಾಲಯಗಳಿಗೆ ತೆರಳಿದನು. ಅಲ್ಲಿ ಸುಂದರವಾದ ವನಗಳು, ಗುಹೆಗಳು, ಫಲವೃಕ್ಷಗಳೂ, ಅನೇಕ ಜನ ಯೋಗಿಗಳು, ತಾಪಸಿಕರು, ಸಿದ್ಧರು ಇದ್ದಾರೆ. ಅವರ ಜೊತೆ ಸೇರಿ ಸದಾನಂದ ಒಂದು ಗುಹೆಯಲ್ಲಿ ಎಂಬತ್ತು ವರ್ಷಕಾಲ ಧ್ಯಾನ ಮಾಡಿದರು.

ಎಂಬತ್ತು ವರ್ಷಗಳ ನಂತರ ಅಲ್ಲಿ ಇರುವವರೆಲ್ಲಾ “ನೀನು ಇಲ್ಲಿ ಕಲಿತುಕೊಳ್ಳುವುದೆಲ್ಲಾ ಮುಗಿದಿದೆ. ಭಾರತ ದೇಶದಲ್ಲೆಲ್ಲಾ ತಿರುಗುತ್ತಾ ನೀನು ಕಲಿತಿದ್ದನ್ನೆಲ್ಲಾ ಸಾಧಕರಿಗೆ ಬೋಧಿಸು” ಎಂದರಂತೆ.

ಆ ಹಿಮಾಲಯ ಯೋಗಿಗಳ ಹತ್ತಿರ ಅಪ್ಪಣೆ ತೆಗೆದುಕೊಂಡು ಶ್ರೀ ಸದಾನಂದಯೋಗಿ ಅವರು … ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತ ದೇಶದಲ್ಲೆಲ್ಲಾ ತಿರುಗುತ್ತಾ ಅನೇಕ ಮಹಾರಾಜರಿಂದ ಸಾಮಾನ್ಯರವರೆಗೂ ತಮ್ಮ ಬೋಧನೆಗಳನ್ನು ತಿಳಿಸುತ್ತಾ … ಆಂಧ್ರದಲ್ಲಿರುವ ಪಾಪಿಕೊಂಡಲು (ಬೆಟ್ಟಗಳು), ನೆಲ್ಲೂರು, ನಂದ್ಯಾಲ, ರೇಗಡಿಗೂಡೂರು ಮೂಲಕ 1975ನಲ್ಲಿ ಕರ್ನೂಲ್‌ಗೆ ಬಂದರು. ಅಲ್ಲಿ ಇರುವ ಹಳೇ ಬಸ್ ನಿಲ್ದಾಣದ ಹಿಂದೆ ಇರುವ “ರಾಘವೇಂದ್ರ ಲಾಡ್ಜಿ”ನಲ್ಲಿರುವ ಒಂದು ಕೊಠಡಿಯಲ್ಲಿ ಆರು ವರ್ಷಗಳಿಂದ ವಾಸಿಸುತ್ತಿದ್ದರು, ಆಗ, ಅಂದರೆ, 1981 ರಲ್ಲಿ ನಾನು ಅವರನ್ನು ಭೇಟಿಯಾದೆ.

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್‌ಗೆ ಆದಿ ದೇವರು ಶ್ರೀ ಸದಾನಂದ ಯೋಗಿ. ಸುಮಾರು ಎರಡೂವರೆ ವರ್ಷಗಳ ಕಾಲ ಅವರ ಸೇವಾಭಾಗ್ಯ ನನಗೆ ಒದಗಿಬಂದಿವೆ. ಸದಾನಂದಯೋಗಿ ಅನಂತರ ಅಂತಹ ಮಹಾಪುರುಷರು. ಕಾಶಿರೆಡ್ಡಿ ನಾಯನ ಅವರು ಒಂದೇ ಸಮಯದಲ್ಲಿ ಐದು ಕಡೆ ತಮ್ಮ ಭೌತಿಕ ಶರೀರದಿಂದ ಅವರು ದರ್ಶನ ಕೊಡಬಲ್ಲವರಾದರು. ಕಾಶಿರೆಡ್ಡಿ ನಾಯನ ಕರ್ನೂಲ್ ಧ್ಯಾನ ಕೇಂದ್ರಕ್ಕೆ ಅನೇಕ ಬಾರಿ ಬಂದು ಪಿರಮಿಡ್‌ನಲ್ಲಿ ಧ್ಯಾನ ಮಾಡಿಕೊಳ್ಳುತ್ತಿದ್ದರು.

ನನ್ನ ಜೀವನದಲ್ಲಿ ಎದುರಾದ ಇಬ್ಬರು ಅದ್ಭುತವಾದ ಮಾಸ್ಟರ‍್ಸ್ ಈ ಶ್ರೀ ಸದಾನಂದ ಯೋಗಿ ಮತ್ತು ಶ್ರೀ ಕಾಶಿರೆಡ್ಡಿ ನಾಯನ ಅವರಿಗೆ ಗುರುಪೂರ್ಣಿಮೆಯ ಈ ಶುಭಸಂದರ್ಭದಲ್ಲಿ ನನ್ನ ವಿನಯಪೂರ್ವಕ ವಂದನೆಗಳನ್ನು ತಿಳಿಸುತ್ತಿದ್ದೇನೆ.