“ಧ್ಯಾನದ ಪ್ರಾಥಮಿಕ ಅಂಶಗಳು ಮತ್ತು ಸ್ಥಿತಿಗಳು”

 

ಭೂಲೋಕ ಎಂಬ ಪಾಠಶಾಲೆಯಲ್ಲಿ ನಾವು ಮೂರು ಹಂತಗಳಲ್ಲಿ ಪಾಠವನ್ನು ಕಲಿತು ಉನ್ನತಿಯನ್ನು ಸಾಧಿಸುತ್ತೇವೆ. ಅದರಲ್ಲಿ ಮೊದಲನೆಯದು ‘ಪ್ರಾಥಮಿಕ ವಿದ್ಯಾಸ್ಥಿತಿ’, ಎರಡನೆಯದು ‘ಪ್ರಾಥಮಿಕೋನ್ನತ ವಿದ್ಯಾಸ್ಥಿತಿ’ ಮತ್ತು ಮೂರನೆಯದು ‘ಉನ್ನತ ವಿದ್ಯಾಸ್ಥಿತಿ’.

‘ಪ್ರಾಥಮಿಕ ವಿದ್ಯಾಸ್ಥಿತಿ’: ಇದರಲ್ಲಿ ನಾವು ಮೂರು ವಿಧಗಳ ಪಠ್ಯಕ್ರಮವನ್ನು ಕಲಿಯುತ್ತೇವೆ:
1. Non-killing ಯಾವುದನ್ನೂ ಸಾಯಿಸಬಾರದು: ಏನನ್ನೂ ಸಾಯಿಸುವ ಹಕ್ಕು ನಮಗಿಲ್ಲ. ಪ್ರತಿ ಜೀವಿಗೆ ಜೀವಿಸುವ ಹಕ್ಕು .. ಮತ್ತು ನಮ್ಮಂತೆಯೇ ಅಭಿವೃದ್ಧಿ ಹೊಂದುವ ಹಕ್ಕು ಇದೆ. ಆದ್ದರಿಂದ, ಆ ಹಕ್ಕನ್ನು ನಾವು ಕಿತ್ತುಕೊಳ್ಳಬಾರದು. ಮೂಕಜೀವಿಗಳನ್ನು ಸಾಯಿಸುತ್ತಾ ಇದ್ದರೆ .. ಅವುಗಳಿಂದ ಚೆಲ್ಲುವ ಪ್ರತಿ ರಕ್ತದ ಹನಿಗೆ ತಕ್ಕ ದಂಡವನ್ನು ನಾವು ಕಟ್ಟಲೇಬೇಕು, ತಕ್ಕ ಶಾಸ್ತಿಯನ್ನು ಅನುಭವಿಸಲೇಬೇಕು .. ಇದು ತಪ್ಪಿದ್ದಲ್ಲ. ಆ ಬಾಕಿ ತೀರಿಸಲು ಮತ್ತೆ ಮತ್ತೆ ಜನ್ಮಿಸಲೇಬೇಕು .. ಕರ್ಮಚಕ್ರದಲ್ಲಿ ಮತ್ತೆ ಮತ್ತೆ ಸಿಲುಕಿಕೊಳ್ಳಲೇಬೇಕು .. ತಸ್ಮಾತ್ ಜಾಗ್ರತಾ!

2. Non-violence ಹಿಂಸೆ ಮಾಡಬಾರದು: ತಮಗಿಂತ ಬಲಹೀನರಾದವರ ಮೇಲೆ ತುಂಬಾ ಜನ ತಮ್ಮ ಪ್ರತಾಪವನ್ನು ತೋರಿಸುತ್ತಾರೆ .. ಅದಕ್ಕೆ ಉದಾಹರಣೆ .. ಗಂಡ ಹೆಂಡತಿಯ ಮೇಲೆ ತೋರಿಸುವ ಅಧಿಕಾರ .. ಮತ್ತು ಮಕ್ಕಳ ಮೇಲೆ ತಂದೆತಾಯಂದಿರು ಎಸಗುವ ಹಿಂಸೆ.

3. Non-Interference ಇತರರ ವಿಷಯದಲ್ಲಿ ಮಧ್ಯಪ್ರವೇಶವಿರಬಾರದು: ಇತರರ ವ್ಯಕ್ತಿಗತ ವಿಷಯಗಳಲ್ಲಿ ಮಧ್ಯಪ್ರವೇಶಿಸುವುದು ಸ್ವಲ್ಪವೂ ಸರಿಯಲ್ಲ. ಇನ್ನೊಬ್ಬರ ಕ್ರಿಯಾಕ್ಷೇತ್ರದ ಸ್ವಾತಂತ್ರವನ್ನು ಕಿತ್ತುಕೊಳ್ಳುವ ಹಕ್ಕು ನಮಗಿಲ್ಲ. ಪ್ರತಿಯೊಬ್ಬರಿಗೂ ಅವರವರ ಆಸೆಗಳು, ಕೋರಿಕೆಗಳು ಇರುತ್ತವೆ. ಆದ್ದರಿಂದ ಅವುಗಳ ಮಧ್ಯೆ ಪ್ರವೇಶಿಸಿದರೆ ಅವರ ಬದುಕಿನೊಂದಿಗೆ ಮತ್ತು ನಮ್ಮ ಬದುಕುಗಳು ಸಹ ನರಕಪ್ರಾಯವಾಗುತ್ತದೆ; ಇದೆಲ್ಲಾ ಕೂಡಾ ಪ್ರಾಥಮಿಕ ಜೀವನ ವಿದ್ಯಾಭ್ಯಾಸ!

“ಪ್ರಾಥಮಿಕ ವಿದ್ಯೆ ಪೂರ್ತಿಯಾದ ನಂತರ ಮಿಡಲ್ ಸ್ಕೂಲ್ ಅಂದರೆ ಮಾಧ್ಯಮಿಕ ಪಾಠಶಾಲೆಗೆ ಸೇರಬೇಕು. ಭೂಲೋಕದಲ್ಲಿ ಇದು ಎರಡನೆಯ ಸ್ಥಿತಿ! ಇದರಲ್ಲಿ ಎರಡು ಭಾಗಗಳಿವೆ 1. ಧ್ಯಾನ ಮಾಡುವುದು 2. ಮಧ್ಯೇಮಾರ್ಗ”.

1. ಧ್ಯಾನ ಮಾಡುವುದು: ನಮ್ಮ ಬಗ್ಗೆ ನಾವು ತಿಳಿದುಕೊಳ್ಳಲು ಧ್ಯಾನ ಮಾಡಬೇಕು. ‘ನಾವು ಯಾರು? ಎಲ್ಲಿಂದ ಬಂದಿದ್ದೇವೆ? ನಮ್ಮ ಜೀವನ ಲಕ್ಷ್ಯವೇನು?’ ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಧ್ಯಾನಸಾಧನೆ ಒಂದೇ ಉತ್ತರ. ಕ್ರಮತಪ್ಪದ ಧ್ಯಾನಸಾಧನೆಯಿಂದ ನಮ್ಮಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ವಿಕಾಸ ಉಂಟಾಗುತ್ತದೆ.
2. ಮಧ್ಯೇಮಾರ್ಗ: ಜೀವನದಲ್ಲಿ ಎಲ್ಲಾ ವಿಷಯಗಳಲ್ಲೂ ಮಧ್ಯೇಮಾರ್ಗದಲ್ಲಿ ಜೀವಿಸಬೇಕು. ‘ಅತಿ’ಯು ಯಾವುದರಲ್ಲೂ ಕೆಲಸಕ್ಕೆ ಬರುವುದಿಲ್ಲ. ಅತಿಯಾಗಿ ಮಾತನಾಡುವುದು, ಅತಿಯಾಗಿ ತಿನ್ನುವುದು, ಅತಿಯಾಗಿ ನಿದ್ರೆ ಹೋಗುವುದೇ ಅಲ್ಲದೆ, ಪ್ರತಿ ವಿಷಯದಲ್ಲೂ ಜಾಗ್ರತೆಯಾಗಿ ಮಿತವಾಗಿರಬೇಕು. ’ಅತಿ ಸರ್ವತ್ರ ವರ್ಜೆಯೇತ್’ ಅಲ್ಲವೇ!

ಮಾಧ್ಯಮಿಕ ವಿದ್ಯೆಯ ನಂತರ ಉನ್ನತ ಪಾಠಶಾಲೆಯಲ್ಲಿ ಸೇರಿ ಉನ್ನತ ವಿದ್ಯೆಯನ್ನು ಅಭ್ಯಾಸ ಮಾಡಬೇಕು. ಈ ಉನ್ನತ ಪಾಠಶಾಲೆಯಲ್ಲೂ ಕೂಡಾ ಎರಡು ಹಂತಗಳು ಇವೆ:

1.ಬೋಧಿಸತ್ವ ಸ್ಥಿತಿ: ತಾನು ತಿಳಿದುಕೊಂಡ ಜ್ಞಾನವನ್ನು ತನ್ನ ಬಳಿ ಬಂದವರಿಗೆ ಬೋಧಿಸುವವನು ಬೋಧಿಸತ್ವನು. ಕಲಿಯಬೇಕೆಂದು ತಪನೆ ಇರುವವರೇ ಅವರ ಬಳಿ ಹೋಗಬೇಕೆ ಹೊರತು ನಮ್ಮ ಬಳಿ ಆತ ಬರುವುದಿಲ್ಲ.

2.ಬುದ್ಧತ್ವ-ಬುದ್ಧ: ತಾನು ತಿಳಿದುಕೊಂಡ ಜ್ಞಾನವನ್ನು, ಪ್ರತಿ ಊರಿಗೆ ಹೋಗಿ ಎಲ್ಲರಿಗೂ ಹಂಚುವವನು. ಬೋಧಿಸುವವನು ಬುದ್ಧ. ಬುದ್ಧತ್ವ ಅವರನ್ನು ಒಂದು ಕಡೆ ಇರಿಸದು. ನಾನು ಹೊಂದುತ್ತಿರುವ, ಹೊಂದಿದ ಆನಂದವನ್ನು ಎಲ್ಲರಿಗೂ ಹಂಚಬೇಕು ಎನ್ನುವುದು ಅವರ ಆಶಯ. ಎಲ್ಲರನ್ನೂ ಧ್ಯಾನಿಗಳನ್ನಾಗಿ, ಜ್ಞಾನವಂತರಾಗಿ ಮಾಡಬೇಕೆನ್ನುವುದೇ ಅವರ ಜೀವನದ ಗುರಿ. ಆ ಗುರಿಯನ್ನು ಸೇರಿಕೊಳ್ಳುವುದೇ ಅವರ ಜೀವನ ಪರಮಾವಧಿ.

“ಈ ವಿಧವಾಗಿ ಭೂಲೋಕ ಪಾಠಶಾಲೆಯಲ್ಲಿ ತಮ್ಮ ವಿದ್ಯೆಯನ್ನು ಮುಗಿಸಿಕೊಂಡ ಅಂಶಾತ್ಮಗಳು ತಮ್ಮ ಜ್ಞಾನಕ್ಕನುಗುಣವಾಗಿ ‘ಉತ್ತೀರ್ಣ ಅಂಕಗಳು’ ಸಾಧಿಸಿದವರು ಭುವರ್‌ಲೋಕ ಸೇರಿದರೆ, ಅದಕ್ಕಿಂತ ಹೆಚ್ಚು ಅಂಕಗಳು ಸಾಧಿಸಿದವರು .. ಉದಾ: ಶೇಕಡಾ ಐವತ್ತರಷ್ಟು ಅಂಕಗಳು ಹೊಂದಿದವರು ಜನಾಲೋಕ .. ಮತ್ತಷ್ಟು ಹೆಚ್ಚು ಭಾಗ ಸಾಧಿಸಿದವರು ಮಹಾಲೋಕ, ಆಮೇಲೆ ಶೇಕಡಾ 99ವರೆಗೂ ಸಾಧಿಸಿದವರುತಪೋಲೋಕ .. ಶೇಕಡ ನೂರಕ್ಕೆ ನೂರರಷ್ಟು ಸಾಧಿಸಿದವರು ಸತ್ಯಲೋಕ ಸೇರುತ್ತಾರೆ”.

ಸತ್ಯಲೋಕ ಸೇರಿದವರಲ್ಲಿ ಕೆಲವರು .. ಮರಳಿ ಈ ಭೂಮಿಯ ಮೇಲೆ ಬಂದು ಉಪಾಧ್ಯಾಯರಾಗಿ ಬೋಧಿಸುತ್ತಾರೆ .. ಮತ್ತು ಹೀಗೆ ಬರುವಿಕೆ ಎನ್ನುವುದು ಅವರವರ ಇಷ್ಟಾನುಸಾರವಾಗಿರುತ್ತದೆ”.