“ಜೀವನ ಚಕ್ರ ”

 

“ನಾವು” ಅಂದರೆ, .. 1. ಭೌತಿಕ ಶರೀರ 2. ಪ್ರಾಣಮಯ ಕೋಶ 3. ಮನೋಮಯ ಶರೀರ – ಭಾವನಾಮಯ ಕೋಶ 4. ಕಾರಣ ಶರೀರ – ವಿಜ್ಞಾನಮಯ ಕೋಶ 5. ಮಹಾಕಾರಣ ಶರೀರ – ಆನಂದಮಯ ಶರೀರ 6. ವಿಶ್ವಮಯ ಕೋಶ 7. ನಿರ್ವಾಣಮಯ ಕೋಶ.

ನಾವು ಈ ವಿಧವಾಗಿ “ಏಳು ಶರೀರಗಳಿಂದ ಕೂಡಿರುವ ಸಂಪೂರ್ಣ ಸಮುದಾಯ.”

ಈ ಏಳು ಶರೀರಗಳಲ್ಲಿ ಒಂದಾದ ಪ್ರಾಣಮಯ ಶರೀರದಲ್ಲಿ ಕುಂಡಲಿನಿ ರೂಪದಲ್ಲಿ ಒದಗಿರುವ ಪ್ರಾಣಶಕ್ತಿ ಕ್ಷೇತ್ರಗಳಾದ “ಆರು ನಾಡೀಮಂಡಲ ಚಕ್ರಗಳು” ಚೈತನ್ಯಸ್ಥಿತಿಯಲ್ಲಿ ಪ್ರಕಾಶಿಸುತ್ತಿರುವಾಗಲೇ ನಮ್ಮ “ಸಹಸ್ರಾರ” ಎನ್ನುವ ಉನ್ನತವಾದ ಏಳನೆಯ ಸ್ಥಿತಿಯಲ್ಲಿ ವಿರಾಜಿಸುತ್ತಾ ಇರುತ್ತೇವೆ.

ಈ ಆರು ಚಕ್ರಗಳು ಕ್ರಮವಾಗಿ ಹೀಗಿವೆ :

“1. ಮೂಲಾಧಾರ ನಾಡೀಮಂಡಲ ಚಕ್ರ: ’ನಾನು ಕೇವಲ ನಖಶಿಖ ಪರ್ಯಂತವಾಗಿರುವ ಭೌತಿಕ ಶರೀರ ಮಾತ್ರವೇ’ ಎಂದುಕೊಳ್ಳುವವರೆಲ್ಲಾ ಕೂಡಾ ಬೆನ್ನುಮೂಳೆಯ ಕೊನೆಯ ಆಸನ ಸ್ಥಾನದಲ್ಲಿರುವ ಮೂಲಾಧಾರ ಚಕ್ರದಲ್ಲಿ ಜೀವಿಸುತ್ತಿರುವವರು. ಯಾರಿಗೆ ಸ್ವಂತ ಶರೀರ ಧರ್ಮಶಾಸ್ತ್ರದ ಬಗ್ಗೆ ಸರಿಯಾದ ಅರಿವು ಇಲ್ಲದೇ ಅಶಾಸ್ತ್ರೀಯವಾಗಿ ಜೀವಿಸುತ್ತಾ ಶರೀರವನ್ನು ದ್ವೇಷಿಸುತ್ತಾ ಅದನ್ನು ಯಮಯಾತನೆಗೆ ಗುರಿಮಾಡುತ್ತಿರುತ್ತಾರೊ ಅವರ ಮೂಲಾಧಾರ ನಾಡೀಮಂಡಲ ಚಕ್ರ ಮುದುಡಿಕೊಂಡು ಚೈತನ್ಯ ವಿಹೀನವಾಗಿರುತ್ತದೆ.”

“ಹಾಗಲ್ಲದೇ, ಸ್ವಂತ ಶರೀರದ ಬಗ್ಗೆ ಪ್ರೀತಿಯಿಂದ, ಅರಿವಿನಿಂದ ಇರುತ್ತಾ ಶರೀರ ಧರ್ಮಶಾಸ್ತ್ರವನ್ನು ಅನುಸರಿಸಿ ಯಾರು ಹೊಣೆಯರಿತು ಜೀವಿಸುತ್ತಾ ಇರುತ್ತಾರೋ ಅವರ ಮೂಲಾಧಾರ ನಾಡೀಮಂಡಲ ಚಕ್ರ ಚೆನ್ನಾಗಿ ಅರಳಿ .. ಚೈತನ್ಯದಿಂದ ತುಂಬಿರುತ್ತದೆ.”

2. “ಸ್ವಾಧಿಷ್ಠಾನ ನಾಡೀಮಂಡಲ ಚಕ್ರ”: ಸದಾ ’ಮನೋಸ್ಥಿತಿ’ಯಲ್ಲಿ ಇರುತ್ತಾ ’ಮನಸ್ಸಿ’ನಿಂದಲೇ ಜೀವಿಸುವವರೆಲ್ಲಾ ಕೂಡಾ ಜನನೇಂದ್ರಿಯ ಸ್ಥಾನದಲ್ಲಿ ಇರುವ ಸ್ವಾಧಿಷ್ಠಾನ ನಾಡೀಮಂಡಲ ಚಕ್ರದಲ್ಲಿ ಇರುವವರು!

“ನಮ್ಮ ಮನಸ್ಸು ಮೂರು ಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರುತ್ತದೆ.”

ಸಂಕಲ್ಪ ವಿಕಲ್ಪಗಳಿಂದ ಕೂಡಿರುವ ಮನೋ ಸ್ಥಿತಿ
ವಿರಾಮವಿಲ್ಲದ ಆಲೋಚನೆಗಳಿಂದ ಕೂಡಿರುವ ಚಿತ್ತ ಸ್ಥಿತಿ
’ನಾನು/ನನ್ನದು’ ಎನ್ನುವ ಪರಿಮಿತಿಗಳಿಂದ ಕೂಡಿರುವ ಅಹಂ ಸ್ಥಿತಿ

“ಮನೋಧರ್ಮ ಶಾಸ್ತ್ರವನ್ನು ಅರ್ಥಮಾಡಿಕೊಳ್ಳದೇ ಅಶಾಸ್ತ್ರಿಯವಾದ ಆಲೋಚನೆಗಳಿಂದ ಮನಸ್ಸನ್ನು ಯಾರು ಪದೇ ಪದೇ ಒತ್ತಡಕ್ಕೆ ಗುರಿಮಾಡುತ್ತಾ ಇರುತ್ತಾರೊ ಅವರ ಸ್ವಾಧಿಷ್ಠಾನ ನಾಡೀಮಂಡಲ ಚಕ್ರ ಮುದುಡಿಕೊಂಡು ಹೀನಸ್ಥಿತಿಯಲ್ಲಿ ಇರುತ್ತದೆ. ಹಾಗಲ್ಲದೇ, ಮನಸ್ಸು ಕೆಲಸಮಾಡುವ ಈ ಮೂರು ಸ್ಥಿತಿಗಳನ್ನೂ ಚೆನ್ನಾಗಿ ಅರ್ಥಮಾಡಿಕೊಂಡು ತಮ್ಮನ್ನು ತಾವು ಪ್ರೀತಿಸಿಕೊಳ್ಳುತ್ತಾ, ಕಿವಿಗಳಿಗೆ ಇಂಪಾದ ಸಂಗೀತ, ಚಿತ್ರಕಲೆ, ನಾಟ್ಯ ಮುಂತಾದ ೬೪ ಕಲೆಗಳಿಂದ ಯಾರು ತಮ್ಮ ಮನಸ್ಸನ್ನು ರಂಜಿಸಿಕೊಳ್ಳುತ್ತಾ ಇರುತ್ತಾರೊ ಅಂತವರ ಸ್ವಾಧಿಷ್ಠಾನ ನಾಡೀಮಂಡಲ ಚಕ್ರ ಅರಳಿ .. ಒಳ್ಳೆಯ ಚೈತನ್ಯದಿಂದ ಕೂಡಿರುತ್ತದೆ.”

3. “ಮಣಿಪೂರಕ ನಾಡೀಮಂಡಲ ಚಕ್ರ”: ಶರೀರದಲ್ಲಿನ ನಾಭಿಸ್ಥಾನದಲ್ಲಿ ಇರುವ ಮಣಿಪೂರಕ ಚಕ್ರ ’ಬುದ್ಧಿ’ಗೆ ಸಂಬಂಧಿಸಿದ್ದು. ಯುಕ್ತಾಯುಕ್ತ ವಿಚಕ್ಷಣೆಯಿಂದ ಕೂಡಿರುವ ಬುದ್ಧಿಯನ್ನು ಅನುಸರಿಸದೇ ಯಾರು ಅವಿವೇಕದಿಂದ ಕೆಲಸಗಳನ್ನು ಮಾಡುತ್ತಾ ಇರುತ್ತಾರೊ ಅವರ ಮಣಿಪೂರಕ ನಾಡೀಮಂಡಲ ಚಕ್ರ ಮುದುಡಿಕೊಂಡು ಚೈತನ್ಯ ವಿಹೀನವಾಗಿ ಬದಲಾಗುತ್ತದೆ.

“ವಿಜ್ಞಾನದಾಯಕವಾದ ಪುಸ್ತಕಗಳನ್ನು ಓದುತ್ತಾ ಧ್ಯಾನ, ಸಜ್ಜನಸಾಂಗತ್ಯಾದಿಗಳ ಮೂಲಕ ಬುದ್ಧಿಯನ್ನು ಸಾಣೆಹಿಡಿಯುತ್ತಾ ಉಪಯುಕ್ತವಾದ ಕೆಲಸಗಳನ್ನು ಮಾಡುವವರ ಬುದ್ಧಿ ವಿಕಾಸಗೊಂಡು .. ಅವರ ಮಣಿಪೂರಕ ನಾಡೀಮಂಡಲ ಚಕ್ರ ಅರಳಿ ಮಣಿಗಳಂತೆ ಪ್ರಕಾಶಿಸುತ್ತಾ ಇರುತ್ತಾರೆ.”

4. “ಅನಾಹತ ನಾಡೀಮಂಡಲ ಚಕ್ರ”: ’ಅನ’ ಅಂದರೆ – ’no’; ’ಆಹತ’ ಅಂದರೆ ’Sound or friction’. ’ಅನಾಹತ’ ಅಂದರೆ .. ’ಸಂಪೂರ್ಣ ಮೌನ’

“ನಾವು ಎಷ್ಟು ಮೌನವಾಗಿದ್ದರೆ ಅಷ್ಟು ನಮ್ಮ ಶರೀರದ ಹೃದಯ ಭಾಗದಲ್ಲಿರುವ ಅನಾಹತ ನಾಡೀಮಂಡಲ ಚಕ್ರ ಅರಳಿರುತ್ತದೆ. ಎಷ್ಟು ನಾವು ಒಳಗೆ, ಹೊರಗೆ ಘರ್ಷಣಪೂರಿತ ವಾತಾವರಣವನ್ನು ಸೃಷ್ಟಿಸುತ್ತಾ ಇರುತ್ತೇವೊ ಅಷ್ಟು ನಮ್ಮ ಅನಾಹತ ನಾಡೀಮಂಡಲ ಚಕ್ರ ಮುದುಡಿಕೊಂಡು ಚೈತನ್ಯರಹಿತವಾಗಿ ಬದಲಾಗುತ್ತದೆ.”

5. “ವಿಶುದ್ಧ ನಾಡೀಮಂಡಲ ಚಕ್ರ”: ನಮ್ಮ ಶರೀರದ ಕಂಠಸ್ಥಾನದಲ್ಲಿರುವ ಸ್ವರಪೆಟ್ಟಿಗೆಯನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮ ವಿಶುದ್ಧಚಕ್ರ ತಿಳಿಸುತ್ತದೆ. ಪ್ರಾಣಹೋದರೂ ಸರಿ .. ಸತ್ಯಪೂರ್ವಕವಾದ ಮಾತುಗಳನ್ನೇ ನಾವು ಧೈರ್ಯವಾಗಿ ಮಾತನಾಡಬೇಕು. ನಮ್ಮ ಸತ್ಯವಚನಗಳನ್ನು ನಾವು ಪ್ರೀತಿಸುತ್ತಾ ಅವುಗಳನ್ನು ತ್ರಿಕರಣಶುದ್ಧಿಯಿಂದ ಆಚರಿಸುತ್ತಾ ಇರುವಾಗ ನಮ್ಮ ವಿಶುದ್ಧ ನಾಡೀಮಂಡಲ ಚಕ್ರ ಚೆನ್ನಾಗಿ ಅರಳುತ್ತಾ ಚೈತನ್ಯಯುತವಾಗಿ ಇರುತ್ತಾರೆ.

“ನಾವು ತಿಳಿದುಕೊಂಡ ಸತ್ಯಗಳನ್ನು ಹೊರಗೆ ಹೇಳಲಾರದೇ ಆತ್ಮನ್ಯೂನತಾ ಭಾವನೆಯಿಂದ ತೊಳಲಾಡುತ್ತಾ ಇರುವಾಗ ನಮ್ಮ ವಿಶುದ್ಧ ನಾಡೀಮಂಡಲ ಚಕ್ರ ಮುದುಡಿಕೊಂಡು ಕಳಾಹೀನವಾಗಿ ಬದಲಾಗುತ್ತದೆ.”

6. “ಆಜ್ಞಾ ನಾಡೀಮಂಡಲ ಚಕ್ರ”: ನಮ್ಮ ಹಣೆಯ ಭಾಗದಲ್ಲಿ ಎರಡು ಉಬ್ಬುಗಳ ನಡುವೆ ಇರುವ ಆಜ್ಞಾಚಕ್ರವನ್ನು ’ಸುದರ್ಶನ ಚಕ್ರ’ ಅಂದರೆ’ಸರಿಯಾಗಿರುವುದನ್ನೇ ದರ್ಶಿಸುವಂತೆ ಮಾಡುವ ಚಕ್ರ’ ಎಂದು ಸಹ ಹೇಳುತ್ತೇವೆ.

“ಧ್ಯಾನದ ಮೂಲಕ ನಮ್ಮ ದಿವ್ಯಚಕ್ಷುವು ತೆರೆಯಲ್ಪಟ್ಟು ಒಳ್ಳೆಯ ಪ್ರಕೃತಿ ದೃಶ್ಯಗಳನ್ನು, ಸೂಕ್ಷ್ಮ ಲೋಕಗಳನ್ನು, ನಾವು ದರ್ಶಿಸುತ್ತಿದ್ದರೆ ನಮ್ಮ ಆಜ್ಞಾಚಕ್ರ ಇನ್ನೂ ಹೆಚ್ಚಾಗಿ ಅರಳುತ್ತಾ ಚೈತನ್ಯಯುತವಾಗುತ್ತದೆ. ಆಗಲೇ ನಾವು ನಮ್ಮ ಪೂರ್ವಜನ್ಮ ಕರ್ಮಫಲಗಳಿಗೆ ಸಂಬಂಧಿಸಿದ ಆತ್ಮಜ್ಞಾನವನ್ನು ಅರ್ಥಮಾಡಿಕೊಳ್ಳುತ್ತಾ ಸ್ಥಿತಪ್ರಜ್ಞ ಸ್ಥಿತಿಯಲ್ಲಿರುತ್ತೇವೆ. ಅಂತಹ ನಿಶ್ಚಲ ಗುರುಸ್ಥಿತಿಯಲ್ಲಿ ನಾವಿದ್ದಾಗ .. ನಮ್ಮ ಮಾತೇ ’ಮಂತ್ರ’ದಂತೆ ಬದಲಾಗುತ್ತದೆ!”

7. “ಸಹಸ್ರಾರ ಸ್ಥಿತಿ”: ಬೆನ್ನು ಮೂಳೆಯ ಕಟ್ಟಕಡೆಯ ಆಸನ ಭಾಗದ ಮೂಲಾಧಾರ ಚಕ್ರದ ಹಂತದಿಂದ ಹಣೆಯ ಭಾಗದ ಎರಡು ಉಬ್ಬುಗಳ ನಡುವೆ ಇರುವ ಆಜ್ಞಾಚಕ್ರದ ಹಂತದವರೆಗೂ ಇರುವ ಆರು ಚಕ್ರಗಳೂ ಸಂಪೂರ್ಣವಾಗಿ ಅರಳಿ ಉನ್ನತ ಚೈತನ್ಯ ಮಟ್ಟದಲ್ಲಿ ನಾವಿರುವಾಗ ನಮ್ಮನ್ನು ಕುರಿತು ಸಂಪೂರ್ಣ ಜ್ಞಾನ ನಮಗೆ ತಿಳಿಯುತ್ತದೆ. ಆಗಲೇ ನಮಗೆ ಇತರರಿಗೆ ಸೇವೆ ಮಾಡುವ ಅರ್ಹತೆ ನಮಗೆ ಬರುತ್ತದೆ. ಅಂತಹಸೇವಾರ್ಹತೆಯನ್ನು ಸಂಪಾದಿಸಿಕೊಳ್ಳುವ ಹಂತವನ್ನೇ ’ಸಹಸ್ರಾರಸ್ಥಿತಿ’ ಎನ್ನುತ್ತೇವೆ.

“ಆರು ಬಗೆಯ ಸೇವೆಗಳು”
“ಹೀಗೆ ಸಹಸ್ರಾರ ಸ್ಥಿತಿಯಲ್ಲಿ ಇತರರಿಗೆ ಸೇವೆಮಾಡುವ ನಿಷ್ಕಾಮಕರ್ಮ ಹಂತಕ್ಕೆ ತಲುಪಿದಾಗ ನಾವು ಆರು ಬಗೆಯ ಸೇವೆಗಳನ್ನು ಮಾಡಬಲ್ಲವರಾಗುತ್ತೇವೆ”:

1. ಮೂಲಾಧಾರ ಸೇವೆ: ಇತರರ ಭೌತಿಕ ಶರೀರಕ್ಕೆ ಮಾಡುವ ಸೇವೆ. ಉದಾ: ಮಸ್ಸಾಜ್ ಮಾಡುವುದರ ಮೂಲಕ ರೋಗಿಗಳ ಶರೀರಗಳನ್ನು ಸಾಂತ್ವನಗೊಳಿಸುವುದು, ಹಸಿವೆ ನೀಗಿಸಲು ಅನ್ನದಾನ ಮಾಡುವುದು, ಮುಂತಾದವು.

2. ಸ್ವಾಧಿಷ್ಠಾನ ಸೇವೆ: ಇತರರ ಮನಸ್ಸನ್ನು ರಂಜಿಸುವಂತೆ ಒಳ್ಳೆಯ ಇಂಪಾದ ಸಂಗೀತವನ್ನು ಕೇಳಿಸಿಕೊಳ್ಳುವಂತೆ ಮಾಡುವುದು, ಹಾಡುವುದು, ಚಿತ್ರಗಳನ್ನು ಬಿಡಿಸುವುದು, ನೃತ್ಯ ಮಾಡುವುದು ಮುಂತಾದವು.

3. ಮಣಿಪೂರಕ ಸೇವೆ: ಇತರರ ಬುದ್ಧಿಯನ್ನು ವೃದ್ಧಿಗೊಳಿಸುವ ವೈಜ್ಞಾನಿಕ ಪುಸ್ತಕಗಳನ್ನು ಬರೆಯುವುದು, ಓದುವುದು, ಸಜ್ಜನಸಾಂಗತ್ಯಾದಿಗಳನ್ನು ಏರ್ಪಾಟು ಮಾಡುವುದು ಮುಂತಾದವು

4. ಅನಾಹತ ಸೇವೆ: ಇತರರಿಂದ ವಿಶೇಷವಾಗಿ ಮೌನಾಭ್ಯಾಸ ಮಾಡಿಸುವುದು.

5. ವಿಶುದ್ಧ ಸೇವೆ: ಇತರರಿಗೆ ಸತ್ಯಪೂರ್ವಕವಾದ ಮಾತುಗಳನ್ನು ಮಾತನಾಡುವ ಅವಕಾಶವನ್ನು ನೀಡುವುದು; ಸತ್ಯಪೂರ್ವಕವಾದ ಮಾತುಗಳನ್ನು ಮಾತನಾಡುವವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು.

6. ಆಜ್ಞಾಸೇವೆ: ಧ್ಯಾನಬೋಧನೆಯನ್ನು ವಿಶೇಷವಾಗಿ ಮಾಡುವುದು.

7. ಸಹಸ್ರಾರಸೇವೆ: ಹೀಗೆ ಮೂಲಾಧಾರದಿಂದ ಆಜ್ಞಾಚಕ್ರದವರೆಗೂ ಅತ್ಯಂತ ಅರಿವಿನಿಂದ, ವಿನಯದಿಂದ, ನಿರಂತರ ಎಲ್ಲಾ ಬಗೆಯ ಸೇವೆಗಳನ್ನು ಫಲಾಪೇಕ್ಷೆ ಇಲ್ಲದೇ ಮಾಡುತ್ತಿರುವುದೇ .. ಸಹಸ್ರಾರ ಸ್ಥಿತಿಯಲ್ಲಿರುವ ಒಬ್ಬ ಪಿರಮಿಡ್ ಮಾಸ್ಟರ್‌ನ ಲಕ್ಷಣ.