“ಅಲ್ಲೂ ನಾವೇ .. ಇಲ್ಲೂ ನಾವೇ”

ಅನೇಕಾನೇಕ ಉನ್ನತ ಲೋಕಗಳಿಗೆ ಸೇರಿದ ಆಯಾಯ ಲೋಕಗಳಲ್ಲಿ ಹಾಯಾಗಿ ವೃಂದ ವಿಹಾರಗಳನ್ನು ಮಾಡಿ ಬಂದ ಗೋವಿಂದರಾದ ನಾವು ಅಲ್ಲಿನಂತಹ ಆ ವೃಂದ ವಿಹಾರಗಳನ್ನು ಇಲ್ಲಿಯೂ ಸಹ ಆಡುತ್ತಾ ಇಲ್ಲಿ ಈ ಭೂಮಿಯ ಮೇಲೆ ಬೃಂದಾವನಗಳನ್ನು ಸೃಷ್ಟಿಸುವುದಕ್ಕಾಗಿ .. ಪ್ರಸ್ತುತ ಜನ್ಮ ತೆಗೆದುಕೊಂಡಿದ್ದೇವೆ.

ಆದರೂ ಕೆಲವೊಮ್ಮೆ ನಾವು ಇರುವ ಪರಿಸ್ಥಿತಿಗೆ ಅನುಗುಣವಾಗಿ ಆಗಾಗ ನಮಗೆ .. ನಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ “ಹೆಚ್ಚು”“ಕಡಿಮೆ”ಎನ್ನುವ ಭಾವನೆಗಳು ಬರುತ್ತಿರುತ್ತವೆ. “ಹಾಗಾಗುವುದು ಸಹಜವೇ” ಎಂದು ತಿಳಿಸುತ್ತಾ ಆ ದೇವರುಗಳ ನಿಜಸ್ಥಿತಿಯನ್ನು ಅವರಿಗೇ ಅರಿವು ಮೂಡಿಸುವುದು “ನಿಜವಾದ ಆಧ್ಯಾತ್ಮಿಕತೆ”.

ಮುಂಡಕೋಪನಿಷತ್ ಈ ವಿಷಯದಲ್ಲಿ ನಮಗೆ ಒಳ್ಳೆಯ ಸ್ಪಷ್ಟತೆಯನ್ನು ಕೊಡುತ್ತಿದೆ:

“ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೆ
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ”

ಪೂರ್ಣತ್ವಕ್ಕೆ ಪ್ರತೀಕವಾದ ಸ್ವಜಾತಿಗೆ ಸೇರಿದ ಎರಡು ಬಂಗಾರ ವರ್ಣದ ಪಕ್ಷಿಗಳು .. ಒಂದೇ ವೃಕ್ಷದಲ್ಲಿ ಎರಡು ಬೇರೆ ಬೇರೆ ಕೊಂಬೆಗಳ ಮೇಲೆ ಜೀವಿಸುತ್ತಿರುವಂತೆ! ಕೆಳಗಿನ ಕೊಂಬೆಯಲ್ಲಿ ಇರುವ ಮೊದಲ ಪಕ್ಷಿ ಸಿಹಿಯಾದ ಹಣ್ಣುಗಳನ್ನೂ .. ಮತ್ತು ಕಹಿ, ಹುಳಿ, ಒಗರು ಹಣ್ಣುಗಳನ್ನು ತಿನ್ನುತ್ತಾ .. ಅತ್ತ, ಇತ್ತ ಹಾರುತ್ತಾ, ಆಯಾಸಗೊಂಡು ಗಾಬರಿಗೊಳ್ಳುತ್ತಾ ಹಾರಾಡುತ್ತಿದ್ದರೇ .. ಎರಡನೆಯ ಪಕ್ಷಿ ಮಾತ್ರ ಗಿಡದ ಮೇಲಿನ ಕೊಂಬೆಯ ಮೇಲೆ ಸಾವಧಾನವಾಗಿ ಕುಳಿತು ಏನೂ ಮಾಡದೇ .. ಈ ಕೆಳಗಿನ ಪಕ್ಷಿ ಮಾಡುತ್ತಿರುವ ಹಾರಾಟ ಹೋರಾಟವನ್ನು ಸಾಕ್ಷಿಯಾಗಿ ನೋಡುತ್ತಿದೆಯಂತೆ!

ಇದನ್ನು ಗಮನಿಸಿದ ಕೆಳಗಿನ ಕೊಂಬೆಯಲ್ಲಿನ ಪಕ್ಷಿ “ಅದು ಸಹ ನನ್ನ ಸ್ವಜಾತಿಯ ಪಕ್ಷಿಯಲ್ಲವೇ! ನನ್ನ ಹಾಗೇ ವಿವಿಧ ಹಣ್ಣುಗಳನ್ನು ರುಚಿ ನೋಡದೇ ಅಷ್ಟು ಸಮಾಧಾನವಾಗಿ ಹೇಗೆ ಕುಳಿತುಕೊಳ್ಳಬಲ್ಲದು? ಅದರ ವಿಷಯವೇನೋ ಕಂಡುಕೊಳ್ಳೋಣ” ಎಂದು ನಿಧಾನವಾಗಿ ಮೇಲಕ್ಕೆ ಸಾಗಿ ಚಿಕ್ಕ ಕೊಂಬೆಯ ಮೇಲೆ ಸೇರಿಕೊಂಡಿತಂತೆ!
ತೀರ ಮೇಲೆ ಕೊಂಬೆಗೆ ಹೋಗಿ ನೋಡಿದರೆ .. ಅಲ್ಲಿ ಮತ್ತೊಂದು ಪಕ್ಷಿಯಿಲ್ಲ. ಕೆಳಗಿನ ಕೊಂಬೆಯಲ್ಲಿ ಇರುವ ತಾನೇ ಅಲ್ಲಿ ಸಹ ಪ್ರತಿಬಿಂಬಿಸುತ್ತಿದ್ದೇನೆಂದು ತಿಳಿದುಕೊಂಡು ಆಶ್ಚರ್ಯಗೊಂಡಿತು!

ಆ ಪಕ್ಷಿಯಂತೆ ನಾವು ಕೂಡಾ “ಜೀವಾತ್ಮ”ವಾಗಿ “ಪರಮಾತ್ಮ”ವಾಗಿ ಎರಡೂ ಪರಸ್ಪರ ವಿಪರೀತ ಸ್ಥಿತಿಗಳೊಂದಿಗೆ ಏಕಕಾಲದಲ್ಲಿ ಇರುವುದೇ“ದ್ವೈತ”! ಮತ್ತು “ಆ ಎರಡು ಬೇರೆ ಬೇರೆ ವಿಪರೀತ ಸ್ಥಿತಿಗಳನ್ನು ಅನುಭವಿಸುತ್ತಿರುವುದು ಒಂದೇ ಆತ್ಮ” ಎಂದು ತಿಳಿದುಕೊಳ್ಳುವುದೇ“ಅದ್ವೈತ”.

ಹೀಗೆ “ದ್ವೈತ-ಅದ್ವೈತ” ಎನ್ನುವ ಎರಡು ಸ್ಥಿತಿಗಳು ಪರಸ್ಪರ ಒಂದಾದ ಪೂರ್ಣ ಸ್ವರೂಪವೇ “ನಾವು” ಎಂದು ತಿಳಿದುಕೊಳ್ಳುವುದು“ಪರಿಪೂರ್ಣಸತ್ಯ”.

ಪರಸ್ಪರ ವಿರುದ್ಧವಾದ ಸ್ಥಿತಿಗಳನ್ನು ಏಕಕಾಲದಲ್ಲಿ, ಏಕಪ್ರಕಾಶದೊಂದಿಗೆ, ವಿರಾಜಿಸುತ್ತಾ ಅದರ ಸ್ವರೂಪವನ್ನು ನಮಗೆ ಸಂಪೂರ್ಣವಾಗಿ ಅರ್ಥಮಾಡಿಸುವುದೇ “ಆಧ್ಯಾತ್ಮಿಕ ವಿಜ್ಞಾನ ಶಾಸ್ತ್ರ”.

ಬಹಳ ಜನರು ಈ ಸತ್ಯವನ್ನು ಅರ್ಥಮಾಡಿಕೊಳ್ಳಲಾರದೇ ಆ ಕೆಳಗಿನ ಕೊಂಬೆಯ ಪಕ್ಷಿಯಂತೆಯೇ .. “ಮೇಲೆ ಯಾರೋ ನನಗಿಂತ ದೊಡ್ಡವನು ದೇವರು ಇದ್ದಾನೆ; ನನ್ನ ಕರ್ಮಗಳೆಲ್ಲಕ್ಕೂ ಸ್ವತಃ ‘ಆ ದೇವರು’ ಜವಾಬ್ದಾರನು .. ಮತ್ತು ನಾನು ಆ ದೇವರಿಗಿಂತ ಶಕ್ತಿಹೀನನು” ಎಂದು ತಮ್ಮನ್ನು ತಾವೇ ಕಡಿಮೆ ಮಾಡಿಕೊಂಡು ಆ ಮೇಲಿರುವ ‘ದೇವರ’ನ್ನು ಭಜಿಸುತ್ತಾ ಸಮಯ ಕಳೆಯುತ್ತಾರೆ! ಅರಿವಿಲ್ಲದ ಸ್ಥಿತಿಯಲ್ಲಿ ಅವರು ತಮ್ಮ ಸ್ವಸ್ಥಿತಿಯನ್ನು ಮರೆತು ಕೆಳಗಿನ ಕೊಂಬೆಯೊಳಗಿನ ಪಕ್ಷಿ ವಿವಿಧ ಹಣ್ಣುಗಳ ರುಚಿ ನೋಡುವಂತೆ ಕರ್ಮಚಕ್ರದಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ.

ಹಾಗಲ್ಲದೇ “ಪೂರ್ಣ ಸ್ವರೂಪದಿಂದ ಮೇಲಿನ ಲೋಕದಲ್ಲಿರುವ ದೇವರಂತೆ ವಿರಾಜಿಸುತ್ತಿರುವ ನಾವೇ .. ನಮ್ಮ ಇಷಪ್ರಕಾರ ಅನುಭವಜ್ಞಾನ ಹೊಂದುವ ಹಾದಿಯಲ್ಲಿ ‘ಅಂಶಾತ್ಮ’ರಾಗಿ ಬೇರ್ಪಟ್ಟು ಇಲ್ಲಿಗೆ ಬಂದು .. ಭೂಮಿಯೊಂದಿಗೆ ವೈವಿಧ್ಯಮಯ ಲೋಕಗಳಲ್ಲಿ .. ಮತ್ತು ಬೇರೆ ಬೇರೆ ಲೋಕಗಳಲ್ಲಿ .. ವಿರಾಜಿಸುತ್ತಾ ಇದ್ದೇವೆ! ಒಂದೇ ನಾಣ್ಯದ ಎರಡು ಮುಖಗಳಂತೆ, ನಾವು ಒಂದು ಕಡೆ ‘ನರರು’ ಮತ್ತೊಂದು ಕಡೆ ‘ನಾರಾಯಣರು’” ಎಂದು ತಿಳಿದುಕೊಳ್ಳಬೇಕು.

ಧ್ಯಾನದಿಂದ ಈ ಸತ್ಯವನ್ನು ತಿಳಿದುಕೊಂಡ ಮರುಕ್ಷಣ ಕೆಳಗಿನ ಕೊಂಬೆಯೊಳಗಿನ ಪಕ್ಷಿ ಮೇಲಿನ ಕೊಂಬೆಗೆ ಸೇರಿಕೊಂಡು ತನ್ನ ಸ್ವಸ್ವರೂಪವನ್ನು ಗುರುತಿಸಿ ಆಶ್ಚರ್ಯಗೊಂಡಂತೆ ನಾವು ಕೂಡ ನಮ್ಮ ಸ್ವಯಂ ಪೂರ್ಣ ನಿಜಸ್ಥಿತಿಯನ್ನು ಗುರುತಿಸಿ ಆಶ್ಚರ್ಯಗೊಳ್ಳುತ್ತೇವೆ!